ಕಳೆದ ವರ್ಷದ ದಸರ ಅಕ್ಕ ರುಕ್ಮಿಣಿ ಇಲ್ಲದೆಯೇ ನಡೆದಿತ್ತು. ಶ್ರೀನಿಗೆ ಮರೆತು ಹೋಗಿತ್ತು, ಕಳೆದ ದಸರೆಗೆ ರುಕ್ಮಿಣಿ ಏಕಿರಲಿಲ್ಲವೆಂದು. ಅದನ್ನು ಯೋಚಿಸಲೂ ಆತ ಶ್ರಮವಹಿಸಲಿಲ್ಲ. ಎಲ್ಲೋ ಅಮ್ಮ - ಮಗಳ ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಇದ್ದರಿಬೋದು ಎಂದು ಅತೀ ಸುಲಭವಾದ ಕಾರಣವೊಂದನ್ನ ಮನೆಯಲ್ಲಿ ಎಲ್ಲರೂ ಊಹಿಸುವ ರೀತಿಯಲ್ಲೇ ಅವರಿಬ್ಬರೂ ಇದ್ದದ್ದು. ಆದರೆ ಈ ಬಾರಿ ಮಗಳೇ ದಸರೆಗೆ ಮೈಸೂರಿಗೆ ಬರ್ತೇನೆ ಅಂತ ಅಮ್ಮನ ಬಳಿ ಖುಷಿಯಿಂದ ಹೇಳಿದ್ದೂ ಮನೆಯವರಿಗೆ ಹೊಸತೇನಾಗಿರಲಿಲ್ಲ. ಅವರಿಬ್ಬರ ಸಂಬಂಧ ಹಾಗೆಯೇ - ಯಾವಾಗ ಕೆಡ್ತದೆ, ಯಾವಾಗ ರಿಪೇರಿಯಾಗ್ತದೆಯಂತ ಊಹಿಸಲಸಾಧ್ಯ. ಆದರೆ ಕೆಟ್ಟಿದ್ದು ಎಂದಾದರೂ ರಿಪೇರಿಯಾಗ್ತದೆ ಅನ್ನೋದಂತೂ ನಿಜ.
Monday, April 29, 2024
Sunday, April 21, 2024
ದ್ವಾರಬಂಧ
ಸುಮಾರು ಹತ್ತು ವರ್ಷಗಳ ಕೆಳಗೆ ಯೂನಿವರ್ಸಿಟಿಗೆ ಈಗಿನ ರೀತಿಯ ದ್ವಾರಬಂಧಗಳಾಗಲೀ, ಭದ್ರತೆಯಾಗಲೀ ಇರಲಿಲ್ಲ. ಯೂನಿವರ್ಸಿಟಿಯ ಒಳಗಿನ ಡಬಲ್ ರೋಡಿನಲ್ಲಿ - ಆಗಿನ್ನೂ ಈಗಿನ ರೀತಿ ಮಧ್ಯ ಒಂದು ಡಿವೈಡರ್ ಸಹ ಇರಲಿಲ್ಲ- ಬಸ್ಸುಗಳೇ ಓಡಿಯಾಡ್ತಿದ್ವು. ಹಾಗಾಗಿ ಈಗಲೂ ಯೂನಿವರ್ಸಿಟಿಯ ಒಳಗೆ ಕೆಲವು ಕಡೆ ಬಸ್ ಸ್ಟಾಪುಗಳನ್ನ ಕಾಣಬೋದು. ರಾತ್ರಿ ಯಾವ ಸಮಯದಲ್ಲಿ ಬೇಕಾದರೂ ಯೂನಿವರ್ಟಿಯ ಒಳಗೆ ಬರಲಿಕ್ಕೆ ಅಥವಾ ಹೊರಗೆ ಹೋಗಲಿಕ್ಕೆ ಹತ್ತಾರು ದಾರಿಗಳಿದ್ವು. ಆ ದಾರಿಗಳ ಇಕ್ಕೆಲಗಳಲೆಲ್ಲಾ ಮರ ಗಿಡ ಗೆಂಟೆಗಳೇ. ಸದಾನಂದ ಎರಡನೇ ವರ್ಷದ ಎಂ.ಎಸ್ಸಿಗೆ ಬರುವ ವೇಳೆಗೆ ದ್ವಾರಬಂಧಗಳ ನಿರ್ಮಾಣ ಆರಂಭವಾಗಿ, ಎಂ.ಎಸ್ಸಿ ಮುಗಿಯುವ ವೇಳೆಗೆ ಸಂಪೂರ್ಣಗೊಂಡಿತು. ಬಸ್ಸುಗಳೂ, ಯೂನಿವರ್ಸಿಟಿಗೆ ಸಂಬಂಧ ಪಡದ ವಾಹನಗಳೂ ಎಲ್ಲದರ ಎಂಟ್ರಿ ಬಂದಾಯಿತು. ಯಾರೆಂದರಾಗಲೀ ಸಂಜೆ ಕತ್ತಲಿನ ಮೇಲೆ ಒಳಗೆ ನುಗ್ಗಲು ಸಾಧ್ಯವೇ ಇಲ್ಲ. ಗೇಟಿನಲ್ಲಿ ವಾಚ್ ಮೆನ್ ಗಳಿಗೆ ಕಾರಣ ನೀಡಬೇಕು. ಹಾಸ್ಟಲ್ ಹುಡುಗಿಯರಂತೂ ಸಂಜೆ ಏಳರ ಮೇಲೆ ಹಾಸ್ಟಲಿನಿಂದಲೇ ಹೊರಗೆ ಅನುಮತಿಯಿಲ್ಲದೇ ಕಾಲಿಡಲಾಗುತ್ತಿರಲಿಲ್ಲವಾದ್ದರಿಂದ, ಸಂಜೆ ಏಳುಗಂಟೆಯ ಮೇಲೆ ಹುಡುಗಿಯರು ಯೂನಿವರ್ಸಿಟಿಯ ಒಳಗೆ ಹೋಗೋದು ಅಪರೂಪವೇ.
Subscribe to:
Posts (Atom)