Tuesday, March 10, 2026

ವಿಕೃತಿ

ಗಾಢವಾದ ನಿದ್ದೆ,  ಏಳುವ ಚೂರು ಮನಸ್ಸಿಲ್ಲದ ಹಾಗೆ.  ಒಂಚೂರು ನೆನಪಿದೆ  - ಓದುತ್ತಿದ್ದ ಪುಸ್ತಕ ಮಗಚಿ ಪುಟಗಳ ಮೇಲೆ ಮಲಗಿಸಿಟ್ಟದ್ದು. ಅದು ಎಡಗಡೆಯೋ? ಬಲಗಡೆಯೋ? ಹೀಗೆ ಯೋಚಿಸಲು ನಾನು ಹಾಸಿಗೆಯ ಮಧ್ಯದಲ್ಲಿ ಮಲಗಿದ್ದೇನೆನ್ನೋದು ಖಾತ್ರಿ ಇರಬೇಕಲ್ಲ. 'ಚಳ್' ಎಂದು ನರದೊಳಗಿಂದ ಹರಿದ ನೋವೊಂದು 'ಅಮ್ಮಾ' ಎಂದು ಕೂಗಿಸಿತು. ಯಾಕಾದರೂ ಕೂಗಿದೆನೋ. 'ಅಮ್ಮಾ' ಹೊರಗೆ ಪಸರಿಸಿತೋ ತಿಳಿಯದು. ತಲೆಯ ಒಳಗೆಲ್ಲಾ ಧಿಮ್ಮೆನಿಸಿವ ಹಾಗೆ ಪ್ರತಿಧ್ವನಿಸಿತು. ತಲೆ ತಿರುಗಿಸಲು ಮತ್ತೊಮ್ಮೆ ಪ್ರಯತ್ನಿಸಿದೆ. ಮತ್ತೊಮ್ಮೆ 'ಅಮ್ಮಾ...' - ಅಂತರ್ ಪ್ರತಿಧ್ವನಿ. ಈ ಪ್ರತಿಧ್ವನಿಯ ನೋವಿಗೇ ಮತ್ತೊಮ್ಮೆ ಕೂಗಬೇಕಿನಿಸಿದರೂ ಕಷ್ಟ ಪಟ್ಟು ಸುಮ್ಮನಾದೆ. ಏನಾಯಿತು ಇದ್ದಕ್ಕಿದ್ದ ಹಾಗೆ ನನಗೆ? ಎತ್ತ ಕಡೆ ತಲೆ ತಿರುಗಿಸಿದರೂ ನರವೆಳೆದು ಅಸಾಧ್ಯ ನೋವು. ಕೂಗಿದರೂ ಒಬ್ಬರೂ ಪತ್ತೆಯಿಲ್ಲ. ಕೈ ಕಾಲು ಆಡಿಸಿದಾಗ ನರವೆಳೆದರೆ ಎಂದು ಅನಿಸಿದರೂ, ಒಮ್ಮೆ ಪ್ರಯತ್ನಿಸಿದೆ. ದೇವರ ದಯೆ. ಅವು ಸರಿಯೇ ಇದ್ದವು. ಕತ್ತಿಗೆ ಕೈ ಹಾಕಿ ನಾಜೂಕಾಗಿ ತಿರುಗಿಸೋಣವೇ ಎಂದು ಎರಡೂ ಕಡೆಗಳಿಂದ ಕತ್ತು ಹಿಡಿದೆ. ಚೂರೇ‌ಚೂರು ಅಲಗಿದ್ದಕ್ಕೆ ಮತ್ತೊಮ್ಮೆ ಅಂತರ್ ಪ್ರತಿಧ್ವನಿ ಹೊಮ್ಮಿತು. ಇಷ್ಟು ಕೂಗಿದರೂ ಯಾರೂ ಸಹ ಬರಲಿಲ್ಲವಲ್ಲ? ಸಮಯ ಎಷ್ಟಾಗಿರಬಹುದು? ರೂಮಿನೊಳಗಂತೂ ಬೆಳಕು ಪ್ರಜ್ವಲಿಸುತ್ತಿದೆ. ಅಯ್ಯೋ! ಹತ್ತರ ಮೇಲಾಗಿರಬಹುದೇ? ಹಾಗೇನಾದರೂ ಆಗಿದ್ದರೆ ಇಷ್ಟೊರಳಗಾಗಲೇ ಅಮ್ಮ ನನ್ನನ್ನ ಎಬ್ಬಿಸಬೇಕಿತ್ತಲ್ಲ? ಅರ್ರೇ! ಚಿಲಕ ಹಾಕಿಬಿಟ್ಟೆನೆ. ರೂಮಿನ‌ಬಾಗಿಲು ತಲೆಯ ಹಿಂದೆ ಬಲಬದಿಯಲ್ಲಿ ಇದೆ. ತಿರುಗಲಂತೂ ಅಸಾಧ್ಯ.  ಅಮ್ಮ ಸಾಕಷ್ಟು ಬಾರಿ ಬಡಿದೂ ಬಡಿದೂ ಗಾಬರಿಯಾಗಿರಬಹುದೇ?

Thursday, October 2, 2025

ಪಲಾಯನ

ಸಂಜೆ ಸುಮಾರು 6:30ರ ಸಮಯ. ಕತ್ತಲು ಬೇಗನೆ ಕವಿದಿತ್ತು‌. ಮನೆಯಲ್ಲೆಲ್ಲೂ ದೀಪ ಹಚ್ಚಿರಲಿಲ್ಲ. ನಿಧಾನ ಕಣ್ಣು ತೆರೆದ ಸದಾನಂದನಿಗೆ ಎಲ್ಲವೂ ಈ ನಿದ್ರೆಯ ಕನಸಾಗಿರಲಿಲ್ಲವೇ ಎನ್ನುವ ಸಂಶಯವಂತೂ ಸುಳಿಯಿತು. ಕಣ್ಮಿಟುಕಿಸಿದಂತೆ ಒಡನೆಯೆ ಪ್ರಜ್ಞೆ ಗೋಚರಿಸಿತು‌. ಆಗ್ಗಿಂದ ಕನಸಲ್ಲೋ ಅಥವಾ ನಿಜವೋ ಯಾರೋ ಬಾಗಿಲು ಬಡಿದಂತಿತ್ತು‌. ಸಾಕಷ್ಟು ಬಾರಿ ಇವನಿಗೆ ಕನಸೋ ನನಸೋ ಎನ್ನುವ ರೀತಿಯಲ್ಲಿ ಘಟನೆಗಳು ಘಟಿಸಿದ್ದುಂಟು. ಒಂದೊಮ್ಮೆ ಬಚ್ಚಲ ಮನೆಯಲ್ಲಿ ಕೂತು ಉಚ್ಚೆ ಉಯ್ಯುವಂತೆ ಕನಸು ಬಿದ್ದಿತ್ತು. ಎಚ್ಚರವಾದಾಗ ಚಡ್ಡಿ ಚೂರು ಒದ್ದೆಯಾಗಿದ್ದು ನೋಡಿ, ತಾನು ಬಚ್ಚಲಲ್ಲಲ್ಲವೇ ಉಯ್ದಿದ್ದು ಎಂದು ಗಲಿಬಿಲಿಗೊಂಡಿದ್ದ. ಈಗಲೂ ಹಾಗೆಯೇ ಯಾಕಾಗಿರಬಾರದು ಅಂತೆನಿಸುತ್ತಿದ್ದಂತೆ ಬಾಗಿಲು ತಟ್ಟಿದ ಸದ್ದಾಯಿತು. 

Saturday, September 20, 2025

ಛಾಯೆ

ಆ ಸಂಜೆ ಮನೆಗೆ ಬರುವ ವೇಳೆಗೆ ಕೊಂಚ ಹೈರಾಣಾಗಿದ್ದ. ಒಂದು ಸರ್ಕಾರೀ ಶಾಲೆಯಲ್ಲಿ ಬೆಳಿಗ್ಗೆ ವಸ್ತು ಪ್ರದರ್ಶನಕ್ಕೆ ಹೋಗಬೇಕಿತ್ತು‌. ಅಂದೇ ಏಕೆ ಆಯೋಜಿಸಿದ್ದರು? ಆ ಶಾಲೆಯ ಎಸ್.ಡಿ.ಎಂ.ಸಿ ಯ ಅಧ್ಯಕ್ಷರಿಗೆ ಅಂದೇ ಆಗಬೇಕಿತ್ತು‌, ಹಾಗಾಗಿ. ವಸ್ತು ಪ್ರದರ್ಶನಕ್ಕೂ ಮುನ್ನ ಒಂದು ವೇದಿಕೆ ಕಾರ್ಯಕ್ರಮ. ಅಲ್ಲಿ ಈತ ಮಾತನಾಡಬೇಕಿತ್ತು. ಏನು ಮಾತಾಡೋದು? ಹಿಂದಿನ ದಿನ ಸಾಕಷ್ಟು ಯೋಚಿಸಿ ತಯಾರಿಸಿಕೊಂಡಿದ್ದೇನೋ ಹೌದು! ಆದರೆ, ಅದು ಹಳ್ಳಿ! ತನ್ನ ಮಾತು ರುಚಿಸುವುದೇ? ತನ್ನದೇ ಮೌಢ್ಯವೆಂಬಂತೆ ಕಂಡುಬಿಟ್ಟಲ್ಲಿ? ಆ ಎಸ್.ಡಿ.ಎಂ.ಸಿ ಯ ಅಧ್ಯಕ್ಷರು ವೈಚಾರಿಕರಂತೆ ಬಿಂಬಿತಗೊಂಡವರು. ಗ್ರಹಣದ ದಿನ  ಗ್ರಹಣದ ಕಥೆಗಳ, ಇತಿಹಾಸದ ಅಂತೆಯೇ ವೈಜ್ಞಾನಿಕ ಆಯಾಮಗಳನ್ನ ತಮ್ಮೂರಿನ ಜನರ ಮುಂದೆ ತೆರೆದಿಡುವುದು ಅವರ ಉದ್ದೇಶವಾಗಿತ್ತು. ಅವರು ಫುಕೋಕನ ದೊಡ್ಡ ಅಭಿಮಾನಿಯಂತೆ. ತೇಜಸ್ವಿಯನ್ನ ಅನುಕರಿಸಿದ್ದೂ ಹೌದಂತೆ. ಕಾರ್ಯಕ್ರಮವೆಲ್ಲಾ ಕಳೆದು ತಮ್ಮ 'ಸಹಜ ಕೃಷಿಯ' ಪ್ರಯೋಗವನ್ನ ತೋರಲಿಕ್ಕೆ ಈತನನ್ನ ತೋಟಕ್ಕೆ ಕರೆದೊಯ್ದಿದ್ದರು. ಈತನೂ ಫುಕೋಕಕನನ್ನ ಮೆಚ್ಚಿದ್ದವನೇ. ಪುಕೋಕನ‌ ಬಗ್ಗೆ ಮೊದಲಿಗೆ ತಿಳಿದದ್ದು ಅದೇ ತೇಜಸ್ವಿಯ 'ಸಹಜ ಕೃಷಿ'ಯಿಂದ. ಕಥೆಗಳಿಗೆ ಹೆಚ್ಚು ಮಾರಿಹೋಗುತ್ತಿದ್ದ ಈತ ಫುಕೋಕನದ್ದೇ ಸಹಜ ಕೃಷಿಯ ಬಗೆಗಿನ‌ ಪುಸ್ತಕ ಕೊಂಡು ತಂದಿದ್ದ. ಸಂಪೂರ್ಣವಾಗಿ ಓದಲಾಗಿರಲಿಲ್ಲ. ತಾನು ಓದಿದ್ದು, ಅದರ ಪ್ರತಿಬಿಂಬವೇ ತನ್ನ ಈ ತೋಟ ಎಂದು ಎಲ್ಲೆಂದರಲ್ಲಿ ಹುಚ್ಚಾಪಟ್ಟೆ ಬೆಳೆದಿದ್ದ ಕಳೆಗಳನ್ನು ತೋರಿಸುತ್ತಾ ಅವರು ನಗುತ್ತಿದ್ದರು. ಬರೇ ಕಥೆಗಳನ್ನ ಕೊಚ್ಚುತ್ತಾ ತಿರುಗುತ್ತಿದ್ದ ಈತ ಒಮ್ಮೆಯಾದರೂ ಈಗ ಮೌನಿಯಾಗಿದ್ದ. ಬ್ರೂನೋ, ಗೆಲಿಲಿಯೋರ ಕಥೆಯನ್ನ ಅಂತೆಯೇ ತಾನು ಕೇಳಿದ್ದ ಕೊಲಂಬಸ್ ನ ಗ್ರಹಣದ ಕಥೆಯನ್ನ ಮಕ್ಕಳಿಗೆ ಹೇಳುತ್ತಾ ಮೌಢ್ಯವನ್ನ ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳುವುದು ನಮ್ಮ ಕರ್ತವ್ಯವೆಂದು ಹೇಳಿದ್ದಕ್ಕೆಯೇ ಆ‌ ಅಧ್ಯಕ್ಷರು ಕಾರ್ಯಕ್ರಮದ ನಂತರ ಈತನೊಟ್ಟಿಗೆ ಆಪ್ತರಾಗಿದ್ದಲ್ಲವೇ?

Tuesday, September 2, 2025

ಜಾಲ

ಇದೇ ಅವನ ಊರು ಎಂದು ಹೇಳಲು ಆಗದು. ಯಾವ ಊರಿನ ಯಾವ ಜನಕ್ಕೂ ಹೊಂದಿಕೊಳ್ಳಲು‌ ಸೈ.‌ ಆದರೂ ಎಂದಿಗೂ ಹೊಂದಿಕೊಳ್ಳುವವನೇ ಹೊರತು, ಇತರರು ಹೊಂದಿಕೊಳ್ಳಲಿಕ್ಕಾಗಿ ಕಾದವನಲ್ಲ. ಆದರೆ ಯಾವುದೂ‌ ತನ್ನೂರಲ್ಲ.

Sunday, August 24, 2025

ಐರನೀಸ್

 ಇವಳ ಪ್ರಲಾಪ

ನಿಮ್ಮಪ್ಪನಿಗೆ ಬೇರೆ ಹೆಣ್ಣು ತಂದಿದ್ದರೆ ನಮಗೆ ಈ ಕಷ್ಟವಿರ್ತಿರಲಿಲ್ವೇನೋ! 


Monday, August 4, 2025

ಸ್ವ ಆ ಗತ

ಎಷ್ಟು ಹರಿತ, ಎಷ್ಟು ಗಟ್ಟಿ!
ಇವರೇ ಉದ್ಗರಿಸಿದವರು. 

Sunday, August 3, 2025

ಮೋಹಿ

ಮೌಲ್ಯಗಳೆಲ್ಲಾ ಬುರುಡೆಗಳು. ವಿಕಾಸ ನಮ್ಮೊಳಗೆ ತುರುಕಿಸಿಟ್ಟಿದ್ದು ಸ್ವಾರ್ಥ. ದೀರ್ಘಕಾಲಿಕವಾಗಿ, ಶಾಶ್ವತವಾಗಿಯೇ ಅಂದುಕೋ, ಹೇರಳವಾಗಿ ನನ್ನ ಗುರುತು ತಲತಲಾಂತರವಾಗಿ ಹರಿದು ಹೋಗಬೇಕೆನ್ನುವ ಸ್ವಾರ್ಥ. ಇದೋ ಕೇಳು ಜಕೋಬನ ಒಂದು ಕಥೆ.