ಅಮ್ಮಂದಿರಿಗೆ ಗಂಡು ಮಕ್ಕಳ ಕೂದಲಿನ ಮೇಲೆ ಒಂದು ವಿಶೇಷ ಕಾಳಜಿ. ಅಂದರೆ ಕೂದಲ ಆರೈಕೆಯಲ್ಲಲ್ಲ. ಅದರ ಉದ್ದದಲ್ಲಿ. ಕಣ್ಣಲ್ಲೇ ಅವರಿಗೆ ಒಂದು ಅಳತೆಯ ಮಾಪನವಿರ್ತದೆ. ಮಕ್ಕಳ ಕೂದಲನ್ನ ಅದು ಅತ್ಯಂತ ಜಾಗರೂಕತೆಯಲ್ಲಿ ಆಗಾಗ್ಗೆ ಅಳೆಯುತ್ತಾ ಇರ್ತದೆ. ಒಂದೊಮ್ಮೆ ಅದು ನಿಗದಿಸಿಕೊಂಡ ಮಿತಿಯನ್ನ ದಾಟಿತೆಂದುಕೊಳ್ಳಿ, ಒಂದೇ ಸಮನೆ ಕೂಗಲಾರಂಭಿಸ್ತದೆ. ಮಗು ಚಿಕ್ಕದಿದ್ದರೆ ಇದು ಅಪ್ಪಂದಿರಿಗೆ ಅಲಾರಂ ಇದ್ದಂತೆ. ಅದು ಬೆಳೆದಂತೆ, ಮಗುವಿಗೇ ಅದು ಎಚ್ಚರಿಕೆ. ನನ್ನ ಅನುಭವವಂತೂ ವಿಚಿತ್ರ. ಲೋವರ್ ಮಿಡಲ್ ಕ್ಲಾಸ್ ಮಗುವಾಗಿದ್ದ ನನಗೆ, ಕಟಿಂಗ್ ಗೆ ನಿಗದಿ ಪಡಿಸುವ ದುಡ್ಡಿಗೆ ಒಂದು ನ್ಯಾಯ ಸಿಗಲೇ ಬೇಕು. ಅಂದರೆ ಕಾಸು ಕೊಟ್ಟಷ್ಟು ಕೂದಲೂ! ಹಾಗಾಗಿ ನಮ್ಮದೆಲ್ಲಾ ಎಂದಿಗೂ ಸಮ್ಮರ್ ಕಟ್ಟೇ. 'ಬಿಸಿಲಾದರೇನು, ಮಳೆಯಾದರೇನು, ಕೊಡು ನಿನ್ನ ಅಷ್ಟೂ ಕೂದಲನ್ನು' ಅನ್ನೋದು ನನ್ನ ಅಮ್ಮನ ಧ್ಯೇಯವಾಕ್ಯ. ನೋಡಿ ನಮ್ಮ ಆರ್ಥಿಕತೆಗೂ ಸಮ್ಮರ್ ಕಟ್ಟಿಗೂ ನಂಟುಂಟು. ಕಟಿಂಗ್ ಆಗಾಗ್ಗೆ ಮಾಡಿಸುವ ಪ್ರಮೇಯವಿರೋದಿಲ್ಲಾಂತ. ಈ ಮನಃಸ್ಥಿತಿ ಎಷ್ಟು ಆಳದಲ್ಲಿಳಿದು ಬೇರೂರಿಬಿಡ್ತದೆ ಎಂದರೆ, ಇವತ್ತಿಗೂ, ತಿಂಗಳಿಗೊಮ್ಮೆ ಕಟಿಂಗ್ ಮಾಡಿಸಲು ಶಕ್ಯವಿರುವ ಮಟ್ಟದಲ್ಲೂ, ನನ್ನಮ್ಮ ನನ್ನ ಕಟಿಂಗನ್ನು ನಿರ್ದೇಶಿಸುವ ಮನಃಸ್ಥಿತಿಯನ್ನ ಬಿಟ್ಟಿಲ್ಲ. ನಾನು ಕಟಿಂಗ್ ಮುಗಿಸಿ ಮನೆಗೆ ಬಂದ ಕೂಡಲೇ ನನ್ನ ಕಟಿಂಗನ್ನು ನೋಡಿ 'ಎಂಥಾ ಕಾಲ ಬಂದು ಬಿಡ್ತು' ಅನ್ನುವ ರೀತಿಯಲ್ಲಿ ನನ್ನಮ್ಮ ಅದನ್ನ ಒಪ್ಪುವುದೇ ಇಲ್ಲ. ಒಮ್ಮೆ ನನ್ನ ಸ್ನೇಹಿತರೊಬ್ಬರು ಇದೇ ರೀತಿಯ ಕಥೆಯನ್ನು ಹೇಳಿಕೊಳ್ತಾ ಇದ್ದರು. ತನ್ನಮ್ಮನಿಗೆ ಸಮ್ಮರ್ ಕಟ್ ಹೊಡೆಸಿದ ತಮ್ಮ ಮಗನಿಗಿಂತ ಸುಂದರ ತರುಣ ಪ್ರಪಂಚದಲ್ಲೇ ಇಲ್ಲೆಂದು.
Wednesday, August 28, 2024
Saturday, August 24, 2024
ಭಾವ ತರಂಗ
ಅವತ್ತು ಬೆಳಿಗ್ಗೆ ಇನ್ನೂ ಗಿಡದಲ್ಲೇ ಕೊಯ್ಯದೆ ಉಳಿದಿದ್ದ ದಾಸವಾಳದ ಹೂಗಳನ್ನ ನೋಡಿಯೇ ಐಯ್ಯಂಗಾರ್ರು ಮನೇಲಿ ಇಲ್ಲ ಎಂದು ತಿಳಿಯಿತು. ಪ್ರತೀ ದಿನ ಬೆಳಿಗ್ಗೆ ಏಳರ ಒಳಗೆ ಕಾಂಪೌಂಡಿನ ಒಳಗೆ ಬೆಳೆದು ಕೊಂಡಿದ್ದ ಹೂಗಿಡಗಳೆಲ್ಲದರ ಹೂಗಳು ಖಾಲಿಯಾಗಿರುತ್ತಿದ್ದವು. ಐಯ್ಯಂಗಾರ್ರಾದರೂ ಕಟ್ಟಾ ಆಚರಣೆ ಇರಲಿಲ್ಲ. 'ತಿರು' ಆರಾಧನೆಯನ್ನ ಮೈಗೂಡಿಸಿಕೊಳ್ಳಲಿಲ್ಲ. ಆದರೆ ದಿನಕ್ಕೆ ಒಮ್ಮೆಯಾದರೂ ಸಂಧ್ಯಾವಂದನೆ, ಹೆಚ್ಚಾಗಿ ಬೆಳಗ್ಗಿನ ಹೊತ್ತೆ, ಮಾಡಿ, ದೇವರಿಗೆ ಹೂಗಳೆಲ್ಲವನ್ನೂ ಅರ್ಪಿಸಿ ಗಂಧ, ಆರತಿ ಎಲ್ಲವನ್ನೂ ತೋರಿ ಹಾಲನ್ನ ನೈವೇದ್ಯ ಮಾಡೋದು ಐಯ್ಯಂಗಾರರ ನಿತ್ಯಕರ್ಮವಾಗಿತ್ತು. ದೊಡ್ದ ಕೆಂಪು ನಾಮವನ್ನಂತೂ ಇಡುತ್ತಿದ್ದರು. ಇದು ಪದ್ಮಮ್ಮ ಹೋದ ಮೇಲೂ ನಡೆದಿತ್ತು. ಅದಕ್ಕೂ ಮುನ್ನ ದಿನಕ್ಕೆರಡು ಬಾರಿ ಸಂಧ್ಯಾವಂದನೆ ಮಾಡ್ತಿದ್ದರಂತೆ. ಐಯ್ಯಂಗಾರರು ಆಚರಣೆಯನ್ನೆಲ್ಲಾ ಕಲೀಲಿಲ್ಲವೆಂದಲ್ಲ. ಮೈಗೂಡಿಸಿಕೊಳ್ಳಲಿಲ್ಲವಷ್ಟೆ. ಒಂದು ರೀತಿ ಉದಾಸೀನ. ಇದಕ್ಕೆ ಅವರ ಟ್ರಾನ್ಸ್ ಫರಬಲ್ ಜಾಬ್ ಕೂಡ ಕಾರಣ ಇದ್ದಿರಬೋದು. ಐಯ್ಯಂಗಾರರಲ್ಲಿ ಸಾಮಾನ್ಯ ನಿಂತು ಪೂಜೆ ಮಾಡೋದು. ಹಾಗಾಗಿ ದೇವರ ಮನೆಯಲ್ಲಿ ಕೆಳಗೆ ನೆಲಕ್ಕೆ ಕಟ್ಟೆಯ ಬದಲಾಗಿ ಸ್ವಲ್ಪ ಎತ್ತರದಲ್ಲಿ ಕಟ್ಟೆ ಇರುತ್ತದೆ. ಅದರ ಮೇಲೆ ಒಂದು ಮರದ ಬಾಕ್ಸ್ (ಕೋವಿಲ್ ಆಳ್ವಾರ್ ಎಂದು ಪ್ರತೀತಿ). ಅದರ ಒಳಗೆ ಇವರ ದೇವರುಗಳು. ಈ ವ್ಯವಸ್ಥೆ ಹೋದ ಕಡೆಯೆಲ್ಲಾ ಸಿಗಲಾರದು. ಬ್ಯಾಂಕಿನವರು ಅಬ್ಬಬ್ಬ ಎಂದರೆ ನಾಲ್ಕು ವರ್ಷಕ್ಕಿಂತ ಹೆಚ್ಚಾಗಿ ಒಂದೆಡೆ ಉಳಿಸಲಾರರು. ಹೀಗಾಗಿ, ಮನುಷ್ಯ ಜೀವನದ ವಿಕಾಸದಲ್ಲಿ ಈ ರೀತಿಯ ಕೆಲವು ಉದಾಸೀನಗಳು ಅನಿವಾರ್ಯವೆಂಬಂತೆ ಇವರಲ್ಲೂ ತಲೆದೂರಿತು.