Thursday, January 17, 2019

ಕನ್ಫ್ಯೂಷನ್ಸ್ – 1

 


 ಹೊರಟುಬಿಡು ಪ್ಲೀಸ್….

ನಿನಗೆ ಯಾವುದು ಅನುಕೂಲವೋ ಅದ್ಕಾಗಿಯಷ್ಟೇ ನೀನು ಮಾತನಾಡೋದು ಅಂತ ನಾನು ಹೇಳಿದರೆ ಅದು ನನಗೇ ಪುನಃ ಅನ್ವಯಿಸಿಬಿಡತ್ತೆ ಅನ್ನೋದು ಕಾಡಲಿಕ್ಕೆ ಆರಂಭಿಸಿದ್ದಾಗಿನಿಂದ ನಾನು ಹೆಚ್ಚು ಮಾತನಾಡೋದು ಬಿಟ್ಟೆ ಕಣೊ! ಆ ಅನುಕೂಲ ಯಾವುದೋ ಗೊತ್ತಿಲ್ಲ. ಇದೊಂದು ಕೊನೆಯಿರದ ವಾಕ್ಯ ಸರಣಿ! ನೀನು ನನಗೆ ಹೇಳ್ತಿರ್ಬೋದು,  ನಾನು ನಿನೆಗೆ ಹೇಳ್ತಿರ್ಬೋದು. ಈ ಮಾತು ಅನ್ನೋದು ಯಾಕೋ ಒಂದು ರೀತಿ ಜೇಡರ ಬಲೆಯ ಹಾಗೆ ಅನ್ನಿಸ್ತಿದೆ. ನಾನೇ ಹೆಣೆದ ಬಲೆಯೊಳಗೆ ನಾನೇ ಸಿಕ್ಕಾಕೊಂಡು ಬಿಡಿಸಿಕೊಳ್ಳೋದಿಕ್ಕೆ ಜೀವಮಾನವೆಲ್ಲಾ ಹೊಡೆದಾಡೊ ಸ್ಥಿತಿಯಾಗಿಹೋಗಿದೆ ಯಾಕೋ ನನಗೆ.

Wednesday, January 16, 2019

ವ್ಯಾಮೋಹ

 

ನಾರೀಸ್ತನಭರನಾಭೀದೇಶಾಂ

ದೃಷ್ಟ್ವಾ ಮಾ ಗಾ ಮೋಹಾವೇಶಾಂ|

ಏತನ್ಮಾಂಸವಸಾದಿವಿಕಾರಮ್ 

ಮನಸಿ ವಿಚಿಂತಯ ವಾರಮ್ ವಾರಂ||

“ಫಗ್..” ಬೆಂಕಿ ಕಡ್ಡಿಯನ್ನು ಗೀರಿದ ಸದ್ದು ಯಶೋದೆಯ ಅಂತರಾಳದಲ್ಲಿ ಪ್ರತಿಧ್ವನಿಸಿತು. ಯಾವುದೋ ಅರ್ಥವಿಲ್ಲದ, ಪರಿಚಯವಿಲ್ಲದ, ಆ ಸದ್ದಿಗೆ ಸಂಬಂಧಿಸಿದ್ದ ಘಟನಾವಳಿಯೊಂದು ಕ್ಷಣಮಾತ್ರದಲ್ಲಿ ಮನಸ್ಸಲ್ಲಿ ಜರುಗಿ ಹೋದಂತೆ ಭಾಸವಾಗಿ ಯಶೋದೆ ಉರಿಯುತ್ತದ್ದ ಕಡ್ಡಿಯನ್ನ ಕೈಯಲ್ಲೇ ಹಿಡಿದು ನಿಂತಿದ್ದಳು. ‘ಊ...ಫ್...ಹಾ..” ಕೈ ಸುಟ್ಟ ಭರದಲ್ಲಿ ಯಶೋದೆ ಉದ್ಗರಿಸಿ ಕೈಯನ್ನು ಒಂದಷ್ಟು ಬಾರಿ ಗಾಳಿಯಲ್ಲಿ ಕೊಡವಿ ಮತ್ತೊಂದು ಬೆಂಕಿ ಕಡ್ಡಿಯನ್ನು ಗೀರಿದಳು – ‘ಫಗ್..” ‘ಜೀವನದಲ್ಲಿ ಕೆಲವೊಂದಷ್ಟು ಹಾಗೆಯೇ! ಉರಿದು ಸುಟ್ಟರೂ, ಅದನ್ನು ಊದಿ, ಆರಿಸಿ, ಕೊಡವಿ ಮತ್ತೊಂದನ್ನು ಹೊತ್ತಿಸಬಹುದು. ಆದರೆ ನೆನಪಿರಲಿ ಎರಡನೆಯದ್ದೂ ಸಹ ಸುಡುವುದೇ! ಇದು ಮುಗುಯುವುದು ಎಂದು? ಹಾಂ! ಹೌದು.. ಹೌದು.. ಮತ್ತೆ ಹೊತ್ತಿಸಲು ಆಗದಹಾಗೆ ಸುಟ್ಟು ಕರಕಲಾದಾಗ.! ಇದು ತಿಳಿದೂ ತಿಳಿದೂ.. ಛೇ!’ ಯಶೋದೆಯ ಬೆರಳು ಮತ್ತೊಮ್ಮೆ ಸುಟ್ಟತು! ದೀಪವನ್ನು ಹೊತ್ತಿಸಲು ಗೀರಿದ ಕಡ್ಡಿಗಳು ಕೈ ಸುಟ್ಟವು!

Friday, September 7, 2018

ಭಾವ-ಭ್ರಮೆ

 


“ನಾನೊಂದು ಸುಂದರವಾದ ಭ್ರಮಾಲೋಕವನ್ನ ಸೃಷ್ಟಿಸ್ಲಿಕ್ಕೆ ಹೊರಟಿದ್ದೀನಿ. ಹೋಯ್! ನಿಮ್ಮೆಲ್ಲರ ಸಹಕಾರ ಇಲ್ಲದಿದ್ರೆ ಹೇಗೆ?” ಭಲೇ! ಎಷ್ಟು ಚೆಂದ ವಾಕ್ಯಮಾಲೆಯೊಂದು ಕಾದಂಬರಿಯ ಆರಂಭಕ್ಕೆ ಅರ್ಪಣೆಯಾಯ್ತು ಅಂತ ಹೆಮ್ಮೆಯ ಭಾವವೊಂದು ಮೂಡಿತು. ಬೆನ್ನನ್ನ ನೇರ ಮಾಡಿ ಕಿಟಕಿಯ ಹೊರಗೆ ನನ್ನ ರೂಮಿನ ನೇರಕ್ಕೆ ತಲೆ ಎತ್ತಿದ್ದ ಬೀದಿ ದೀಪದ ಕಂಬವೊಂದರ ಕಡೆಗೆ ದೃಷ್ಟಿ ನೆಟ್ಟಿದೆ. ದೀಪದ ಕೇಸ್ ನ ಒಳಗೆ ಕಪ್ಪು ಕಪ್ಪಗಿನ ರಾಶಿಯೊಂದು ಸ್ಪಷ್ಟವಾಗಿ ಕಾಣುತ್ತಿತ್ತು. ಹಲವಾರು ಕಪ್ಪು ಹುಳಗಳು ದೀಪದ ಸುತ್ತಲೇ ಅದಕ್ಕೆ ಮುತ್ತಿಕ್ಕಲು ಹಾರುತ್ತಿದ್ದವು.

Saturday, March 31, 2018

 

ಎರಡು ಮೂರು ಬಸ್ ಗಳು ಬಂದು ನಿಂತಿದ್ದರೂ ಎಲ್ಲೂ ಖಾಲಿಯಿಲ್ಲ. ಅವುಗಳಲ್ಲೆಲ್ಲಾ ಹಿಡಿಸೋ ಅಷ್ಟು ಜನರ ಹಿಂಡೇ ಅಲ್ಲಿತ್ತು. ಶನಿವಾರವೇನಾದ್ರು ಗವರ್ನಮೆಂಟ್ ಹಾಲಿಡೇ ಬಂದ್ರೆ, ಶುಕ್ರವಾರದ ಸಂಜೆಯ ಬಸ್ ಗಳಲ್ಲಿ ಸೀಟ್ ಪಡಕೋಳೋದು ಒಂದು ಸಾಹಸಾನೆ. ಅಷ್ಟೆಲ್ಲಾ ಜನಜಾತ್ರೆ ಇದ್ದರೂ ಕೂರೋ ಬೆಂಚುಗಳು ಮಾತ್ರ ತುಂಬೋದೇ ಇಲ್ಲ. ಹಿಂದಿನ ಮೂರ್ನಾಲ್ಕು ಬಸ್ ಗಳು ನಿಂತಿದ್ದ ಜಾಗವನ್ನ ಅಂದಾಜಿಸಿ, ಮುಂದಿನ ಬಸ್ ಎಲ್ಲಿ ನಿಲ್ಬೋದು ಅನ್ನೋದನ್ನ ಅವ್ರವ್ರೆ ಲೆಕ್ಕ ಹಾಕಿಕೊಳ್ತ ಆ ಜಾಗಗಳನ್ನ ರಿಸರ್ವ್ ಮಾಡಿಕೊಂಡು ನಿಂತುಬಿಡ್ತಿದ್ರು. ಬೆಂಚುಗಳ ಆಹ್ವಾನವನ್ನ ಗುರುತಿಸ್ತಿದ್ದದ್ದು ಎಲ್ಲೋ ಕೆಲವು ವಯಸ್ಸಾದವ್ರು, ಕೆಲವು ಹೆಂಗಸ್ರು ಹಾಗೂ ಶುದ್ಧ ಸೋಂಬೇರಿಗಳು. 

Thursday, April 20, 2017

ಶೀರ್ಷಿಕೆಯಿಲ್ಲದ್ದು - ೧


ಹೀಗೆ ಆಲೋಚಿಸುತ್ತಾ ನನ್ನಲ್ಲೇ ಉಂಟಾದ ದ್ವಂದ್ವಗಳಗಳ ನಡುವಿನ ಹೋರಾಟವನ್ನ ಮುಕ್ತವಾಗಿ ಇಟ್ಟಿದ್ದೇನೆ. ಇದರಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ, ಹಾಗೂ ಯಾರನ್ನೂ ಯಾವುದನ್ನೂ ದೂಷಿಸುವ ಉದ್ದೇಶವೂ ಇಲ್ಲ. ನನ್ನೊಳಗೇ ಉಂಟಾದ ದ್ವಂದದ ಹೋರಾಟದ ಫಲ ಇದು. ಒಳಗಿಡಲು ಸಾಧ್ಯವಿಲ್ಲದೆ ಹೊರಗೆ ತಂದಿರುವ, ಎಲ್ಲವೂ ಸರಿಯೆ, ಎಲ್ಲವೂ ತಪ್ಪೆ ಎನ್ನುವ ದ್ವಂದ್ವದ ಫಲವಿದು. ಇದನ್ನು ಬರೆಯುವಾಗಲೂ ನಾನು ಯಾವುದಕ್ಕೂ ಯಾವ ಸಮರ್ಥನೆಯನ್ನು ಕೊಡಲಾಗದ ಮಂಪರಿನ ಸ್ಥಿತಿಯಲ್ಲಿದ್ದಂತೆಯೇ ಭಾಸವಾಗುತ್ತಿದ್ದದ್ದು ಅಥವಾ ಅಷ್ಟು ಆಲೋಚಿಸುವಷ್ಟು ಶಕ್ತಿ ನನ್ನಲ್ಲಿಲ್ಲದಿದ್ದಿರಬಹುದು. ಬರೆದ ಮೇಲೆ ಇದನ್ನು ಓದುವ ತಾಳ್ಮೆ ಒಂದಷ್ಟೂ ಉಳಿದಿರಲಿಲ್ಲ. ಕೆಲವೊಂದು ದ್ದಂದ್ವ ಆಳೋಚನೆಗಳೇ ಹಾಗೇನೋ,  ಓದಿದಷ್ಟೂ ಅಸ್ಪಷ್ಟವಾಗುತ್ತಾ ಹೋಗೋದು. ಈ ಎಲ್ಲಾ ಸ್ವಗತ ಒಬ್ಬ ವ್ಯಕ್ತಿಯಲ್ಲಿಯೇ ಆತನ ಆಲೋಚನೆಗಳನ್ನೇ ಆತ ಧಿಕ್ಕರಿಸೋದು, ಅಥವಾ ವಾದಗಳಲ್ಲಿ ತನ್ನ ಅಭಿಪ್ರಾಯಗಳ ದಿಕ್ಕನ್ನೇ ಬದಲಿಸಿಕೊಳ್ಳೋದು, ಆ ಕ್ಷಣಕ್ಕೆ ಎದುರಿನವನ ವಾದವನ್ನ ಒಪ್ಪಿ, ಮುಂದೆಲ್ಲೋ ಅದನ್ನೇ ವಿರೋಧಿಸೋದು, ಈ ರೀತಿಯಾದವುಗಳನ್ನು ಕಾಣಬೋದೇನೋ!  ಮುಕ್ತವಾದ ಭಾವನೆಗಳಿವು. ಈ ಮುನ್ನುಡಿಯೂ ಸಹ ಒಂದು ವಿಪರ್ಯಾಸವೆಂದೇ ತೋರುತ್ತದೆ ಈ ಕಥಾವಸ್ತುವಿಗೆ.]

ಶೀರ್ಷಿಕೆಯಿಲ್ಲದ್ದು -2 
ಗುಡ್ ಗುಡ್ ಗುಡಕ್... ಗುಡ್ ಗುಡ್ ಗುಡಕ್.. ಆಗಸ ಕೂಗಿತು. ಆಟದ ಆರಂಭಕ್ಕೆ ಸೂಚನೆ ಸಿಕ್ಕಿತೆಂದು ಗಾಳಿಯು ಸುಂಯ್..... ಎಂದು ಎದ್ದಿತು. ಗಾಳಿಯ ಸೆಳೆತಕ್ಕೆ ಸಿಕ್ಕು ಮರಗಳು ಆಚೀಚೆಗೆ ಓಲಾಡಿದವು. ರೋಡಿನ ಕಸ, ಧೂಳುಗಳೆಲ್ಲ ಗಾಳಿಯ ರಭಸಕ್ಕೆ ಎದ್ದು ಹೋಗ ಬರುವವರನ್ನೆಲ್ಲಾ ಪ್ರಕೃತಿಯ ಆ ಆಟಕ್ಕೆ ಅಡಚಣೆಯೆಂದು ಬಡಿದು ಬದಿಗೆ ಓಡಿಸಿದವು. ಸುಂಟರವೋ ಏನೋ ಎನ್ನುವಷ್ಟು ರೋಷಮಯದಿಂದ ಮಣ್ಣು, ಕಸಗಳು ಭುರ್ರೆಂದು ಎದ್ದು ಮುಂದೊಂದು ಲೋಕವಿದೆ ಎನ್ನುವುದನ್ನೆ ಮುಚ್ಚಿಟ್ಟು ತಮ್ಮ ಪ್ರತಾಪವನ್ನು ನೆನಪಿಸಿ ಮೆರೆದವು. ಕೆಲವರ ಹಾಕಿದ ಸೀರೆಯ ಸೆರಗನ್ನು, ಕೆಲವರ ಮೇಲ್ಬಟ್ಟೆಯ ತುಂಡನ್ನು, ಕೆಲವರ ಪಂಚೆಯನ್ನು ಆಪೋಷನ ತೆಗೆದುಕೊಳ್ಳಲು ಯತ್ನಿಸಿದವು. ಇಷ್ಟಿದ್ದರು ಆ ಕಸ ಧೂಳುಗಳಿಗೆ ಆಗಸದ ರೆಪ್ಪೆಯನ್ನು ತಾಕಿ ಕಣ್ಣೊಳಗಿಳಿದು ನೀರಿಳಿಸಲು ಆಗಲೇ ಇಲ್ಲ. ಬರೆ ವ್ಯರ್ಥ ಪ್ರತಾಪವನ್ನು ತೋರುತ್ತಾ ಜನರ 

Thursday, August 11, 2016

ಇವಳೆ

ಇವಳೆ,


'ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ....'

ಎಂದೂ ಸಹ ನನ್ನದೊಂದು ಅಪರಿಪೂರ್ಣ, ಅಶಕ್ತ ಬರವಣಿಗೆ. ಪದಗಳು ತಿಳಿದಿಲ್ಲೆಂದಲ್ಲ. ಪದಗಳನ್ನ ರಸವತ್ತಾಗಿ ಜೋಡಿಸುವ ಕಲೆ ಸಿದ್ದಿಸದೇನೋ ಈ ಜನ್ಮಕ್ಕೆ. ನಿನ್ನಂದವನ್ನ ಹೊಗಳಲಿಕ್ಕಂತಲೇ ಅಲ್ಲ ಈ ಸಿದ್ದಿ. ಹೊಗಳಬೇಕೆಂದಿದೆ, ನಿಜ. ಆದರೆ ಹೊಗಳಿ ಹೊಗಳಿ ನಿನ್ನನ್ನು ಎತ್ತಲೋ ಏರಿಸಿ ನಿನ್ನ ಮನದೊಳಗಿಳಿಯಬೇಕೆನ್ನುವ ಬಯಕೆಯೇನೂ ಇಲ್ಲ. ಇದ್ದದ್ದನ್ನು ಇದ್ದಹಾಗೆ ಹೇಳಲು ಯಾವ ಪದಸಮುಚ್ಚಯಗಳು ಬೇಡವೇನೋ. ಅದು ಹೊಗಳಿಕೆಯೂ ಅಲ್ಲೇನೋ! ನೀ ಚೆಂದವಾಗಿದ್ದಿ ಎನ್ನುವುದನ್ನು ಬಹಳ ರಸವತ್ತಾಗಿ ಹಲವಾರು ಉಪಮೆ, ರೂಪಕಗಳಿಂದ ವರ್ಣಿಸಿ ಹೇಳುವುದು ನಿನ್ನೆಡೆಗಿನ ಒಲುಮೆ-ನಲುಮೆಗಳ ಹೊರರೂಪಕಗಳಷ್ಟೇ! ಅವುಗಳ ಬದಲಾಗಿ 'ನೀ ಚೆಂದವಿದ್ದೀ' ಎಂದಷ್ಟೇ ಎನಲು ಭಾವರಸಗಳೆಲ್ಲವನ್ನೂ ಕಳಕೊಂಡು ಬಡಕಲು ಅಸ್ಥಿಪಂಜರದಹಾಗೆ ಕಾಣುವ ರಸಹೀನವೆಂದೆಂಥೆನಿಸುವ ಆ ಎರಡು ಪದಗಳೂ  ಒಲುಮೆ-ನಲುಮೆಗಳ ಹೊರರೂಪಕಗಳೇ! ನನ್ನ ಬರವಣಿಗೆಯ ಬಗೆಗಿನ ತಪನವಿರುವುದೆಲ್ಲಾ ನಿನ್ನೆಡೆಗಿನ ಭಾವನೆಗಳಿಗೆ ತದ್ರೂಪವನ್ನೇ ಸೃಷ್ಟಿಸಲಾಗುತ್ತಿಲ್ಲವೆನ್ನುವುದರಲ್ಲಷ್ಟೇ! ನನ್ನ ನಡವಳಿಕೆ, ನನ್ನ ಮಾತುಗಳು ನನ್ನೊಳಗಿನ ಆ ಭಾವನೆಗಳ ಹೊರರೂಪಕಗಳಂತೆ ಕಾಣಿಸದಾಗಿವೆಯೇ ಎನ್ನುವ ಬೇಸರವಷ್ಟೇ! ನನ್ನ ಮಾತುಗಳೆಲ್ಲವೂ ಒಬ್ಬ ಹುಡುಗ ಒಂದು ಹುಡುಗಿಯನ್ನ ಮೆಚ್ಚಿಸಲಿಕ್ಕೆಂದೇ ಆಡುವಂಥಹ ಚಾಲ್ತಿಯಲ್ಲಿರುವ ಪದ್ದತಿಯೊಂದರ ಅನುಕರಣೆಯಂತೆ ತೋರುವುದೇ ಎನ್ನುವ ಗುಮಾನಿ! ನಾನೆಂದೂ ನಿನ್ನನ್ನು ಮೆಚ್ಚಿಸುವ ಸಲುವಾಗಿ ನಡೆಯಬೇಕೆಂದು ಭಾವಿಸಿದ್ದಿಲ್ಲ. ಅದರಲ್ಲಿ ನನಗೆ ಅಶ್ರದ್ದೇಯೇ, ಅಪನಂಬಿಕೆಯೆ ಹೆಚ್ಚು. ಮಿಗಿಲಾಗಿ ಅದು ನಾಟಕೀಯವೂ ಹೌದು. ಮನಸಿನ ಭಾವನೆಗಳನ್ನು ಯಥಾವತ್ತಾಗಿ ನಿನ್ನ ಮುಂದೆ ಎತ್ತಿಡುವುದಕ್ಕಿಂತ ಮಿಗಿಲಾದ ಅಭಿಮಾನದ, ಒಲುಮೆಯ ಮಾತುಗಳು ಅನವಶ್ಯಕ ಹಾಗೂ ಅಪ್ರಯೋಜಕ!