Monday, August 4, 2025

ಸ್ವ ಆ ಗತ

ಎಷ್ಟು ಹರಿತ, ಎಷ್ಟು ಗಟ್ಟಿ!
ಇವರೇ ಉದ್ಗರಿಸಿದವರು. 

Sunday, August 3, 2025

ಮೋಹಿ

ಮೌಲ್ಯಗಳೆಲ್ಲಾ ಬುರುಡೆಗಳು. ವಿಕಾಸ ನಮ್ಮೊಳಗೆ ತುರುಕಿಸಿಟ್ಟಿದ್ದು ಸ್ವಾರ್ಥ. ದೀರ್ಘಕಾಲಿಕವಾಗಿ, ಶಾಶ್ವತವಾಗಿಯೇ ಅಂದುಕೋ, ಹೇರಳವಾಗಿ ನನ್ನ ಗುರುತು ತಲತಲಾಂತರವಾಗಿ ಹರಿದು ಹೋಗಬೇಕೆನ್ನುವ ಸ್ವಾರ್ಥ. ಇದೋ ಕೇಳು ಜಕೋಬನ ಒಂದು ಕಥೆ. 

ಅಲೆ

ಆಗಷ್ಟೇ 'ಗಾಳಿಪಟ' ಸಿನೆಮಾ ಹೊರಬಂದಿತ್ತು. 'ಮಿಂಚಾಗಿ ನೀನು ಬರಲು..' ಹಾಡನ್ನ ಮನಸ್ಸು ಹೋದಲ್ಲೆಲ್ಲಾ ತಂತಾನೇ ಗುನುಗಿಕೊಳ್ತಿತ್ತು‌. ಇದು ನಯನಾ, ನಯನಾ ಜಮದಗ್ನಿ ಮೇಲಿನ ಕಿಟ್ಟಿಯ ಮೋಹವನ್ನ ಇಮ್ಮಡಿಗೊಳಿಸಿತ್ತು. ಟ್ಯೂಷನ್ನಿನ ಮೆಟ್ಟಿಲುಗಳ ಮೇಲೆ ಕುಳಿತು ಓರೆಗಣ್ಣಿನಿಂದ ಆಕೆ ತನ್ನನ್ನೇ ನೋಡುವಳೆಂದು ಆತ ನೆನೆಸಿದ್ದೆಲ್ಲಾ ಅಕ್ಷರಶಃ ಸತ್ಯವೇ. ಟಿ.ಬಿ. ಸರ್ಕಲ್ಲಿನಲ್ಲಿ ಒಂದೇ ಆಟೋ ಹತ್ತಿದಾಗಿನಿಂದ, ಮಾತು ಕತೆಯೇ ಇಲ್ಲದೇ, ಆಟೋದಲ್ಲಿ ಹಾಕಿದ ಹಾಡುಗಳಿಗೆ ಮನಸ್ಸನ್ನ ಕೊಟ್ಟು, ಹೊರಗೆ ನೋಡುತ್ತಾ, ಆಕೆ ತನ್ನನ್ನೇ ನೋಡುತ್ತಿದ್ದಾಳೆಂದು ಕಿಟ್ಟಿ, ಹಾಗೆಯೇ ಕಿಟ್ಟಿ ತನ್ನನ್ನ ಎಂದು‌ ಇಬ್ಬರೂ ಊಹಿಸುತ್ತಾ ಗಾಳಿಗೆ ಕೂದಲು ಕೆದರಿಸಿಕೊಳ್ಳುತ್ತಾ, ಸರಿ ಮಾಡಿಕೊಳ್ಳುವ ನೆವದಿಂದ ಒಬ್ಬರನ್ನೊಬ್ಬರು ನೋಡುವ ಪ್ರಯತ್ನ ಇಬ್ಬರಿಗೂ ಪದೇ ಪದೇ ಬೇಕೆನಿಸುವ ಮತ್ತಿನಂತಾಗಿತ್ತು. ಒಮ್ಮೊಮ್ಮೆ ಮತ್ತೊಬ್ಬ ಜನ ಬಂದಾಗ ಸ್ವಲ್ಪ ಒಳಗೆ ಒತ್ತಾಗಿ ಕೂರಬೇಕಾಗಿ ಬಂದ ಸಂದರ್ಭ, ಕಿಟ್ಟಿಯ ಮನಸ್ಸು ಧಸ್ಸೆಂದು ಕುಸಿದೇ ಹೋಗುತ್ತಿತ್ತು‌. ಸೋಕಿದ ಮೈಗೆ, ಗಾಳಿಗೆ ಕೆದರಿ ಮುಖದ ಮೇಲೆ ಹಾರುತ್ತಿದ್ದ ಕೂದಲಿಗೆ, ಆಕೆಯ ದೇಹದ ವಾಸನೆಗೆ, ಕಿಟ್ಟಿ ಎದೆಬಡಿತ ನಿಂತೂ ನಿಂತೂ ಹೊಡೆದಂತೆ ಭಾಸವಾಗುತ್ತಿತ್ತು‌. ಒಮ್ಮೊಮ್ಮೆ ಚಿಲ್ಲರೆ ಇಲ್ಲದಿದ್ದಾಗ ಆಕೆಯದ್ದೂ ಸೇರಿ ಕಿಟ್ಟಿ ಕೊಡುವಾಗ ಆತನೂ ಆಕೆಯನ್ನ ನೋಡುತ್ತಿರಲಿಲ್ಲ, ಅವಳೂ ಸಹ. ಒಂದು 'ಥ್ಯಾಂಕ್ಯೂ' ಸಹ ಇಲ್ಲ. ಆದರೆ ವಾಪಾಸು ಹೊರಡುವಾಗ ಆತನದ್ದೂ ಸೇರಿ ಕೊಡುವ ಸರದಿ ಆಕೆಯದ್ದಾಗಿರುತ್ತಿತ್ತು‌. ಅದ್ಕಾಗಿಯೇ ಆಕೆಯೇ ಮೊದಲು ಇಳಿಯುವ ಹಾಗೆ ಕೂರ್ತಿದ್ದಳು. ಇಷ್ಟೆಲ್ಲಾ ವ್ಯವಹಾರಗಳೂ ಮೂಕೀ ಪರದೆಯಲ್ಲೇ, ಕತ್ತಲಲ್ಲೇ ನಡೆಯುತ್ತಿದ್ದದ್ದು. ಮಾತಿಲ್ಲ ಕತೆಯಿಲ್ಲ ನೋಟದ ವಿನಿಮಯಗಳೂ ಇಲ್ಲ. 

Friday, March 28, 2025

ಖಜಾನೆ ಬರಿದಾಗುವ ಹೊತ್ತಲ್ಲಿ

ಆಪ್ತನ ಸಲಹೆಗೆ ಮೆಚ್ಚಿ ರಾಜ ಜಕೋಬ ತಲೆದೂಗಿದ. 'ಈ ರೀತಿಯೆಲ್ಲಾ ಯೋಚಿಸಲು ಒಬ್ಬ ಸಾಮಾನ್ಯನಿಗೆ ಸ್ವಪ್ನಕ್ಕೂ ಅಸಾಧ್ಯ. ನೀನೊಬ್ಬ ಹುಟ್ಟು ಪ್ರತಿಭೆ'. 

 

ಡಂಗೂರ ಸಾರಲಾಯಿತು: 

"ಎಲ್ಲರಿಗೂ ಅತ್ಯದ್ಭುತ ಅವಕಾಶ. ನಿಮ್ಮ ಎಷ್ಟೇ ತಲಮಾರಿನ ಹಿಂದಿನವರನ್ನ ಉಸಿರಾಡಿಸಲು ಸುವರ್ಣಾವಕಾಶ. ಒಂದೊಂದು ಸಮಾಧಿಗೂ, ಹೆಣದ ತಲಮಾರಿನಾಧಾರ ನಿಗದಿಪಡಿಸಿದ ಕಾಸು ತೆತ್ತರಷ್ಟೇ ಸಾಕು".

Sunday, December 1, 2024

ಐರನೀಸ್

 ಐರನಿ - 1


'ನಿಮಗೊಂದು ಸ್ವಾಭಿಮಾನವಿದ್ದಲ್ಲಿ ದೇವಸ್ಥಾನಗಳಿಗೆ ಹೋಗೋದನ್ನ ನಿಲ್ಲಿಸಬೇಕು' ಭಾಷಣಕಾರ ಉದ್ರೇಕದಿಂದ ಹೇಳಿದ ದಲಿತ ಸಮಾವೇಶದಲ್ಲಿ. 

ಬಯಲ ಮೂಲೆಯಲ್ಲೆಲ್ಲೋ ಸಣ್ಣ ದಿಬ್ಬದ ಮೇಲೆ ಕುಕ್ಕರಗಾಲಲ್ಲಿ ಚೆಡ್ಡಿ ಹಾಕಿ, ತಲೆಗೆ ಟವಲ್ ಸುತ್ತಿ ಕೂತಿದ್ದ ಕರಿ‌ ಮುಖದ ತುಕಾರಾಮನ ಮೋಟು ಬೀಡಿ ಎಳೆಯುವ ವೇಗವೂ ಹೆಚ್ಚಿತು. 'ಟಿಣಿ ಣಿಣ್ ಟಿಣ್ ಟಿಣಿ ಣಿಣ್ ಟಿಣ್ ಟಿಣಿ ಣಿಣ್ ಟಿಣ್ ಟಿಣ್' ಅಂಗಿಯ ಜೇಬಲ್ಲಿದ್ದ ಮೊಬೈಲ್ ತೆಗೆದ 'ಹಲೋ....ಬಂದೆ ಸಾಮೆ..' ಭಾಷಣಕಾರನ ಧ್ವನಿಯನ್ನೂ ಮೀರಿದಂತೆ ಕೂಗಿ ಎದ್ದು ನಿಂತು ಟವಲು ತೆಗೆದ. ನಿಂತೇ ಬೀಡಿಯನ್ನ ಸರ ಸರ ಒಂದೈದು ಬಾರಿ ಎಳೆದು, ಪಕ್ಕೆಸೆದು ಹೊರಟ. 

Saturday, November 30, 2024

ಕಣ್ ಕಟ್

ಖಜಾಂಚಿಗಳೇ ಬಾಗಿಲು ತಟ್ಟುತ್ತಿದ್ದದ್ದು. ಸುಂದರ ಸ್ವಪ್ನವೊಂದಕ್ಕುಂಟಾದ ಭಂಗದಿಂದ ಜಕೋಬನಿಗೆ ಸಿಟ್ಟಾಯಿತಾದರೂ, ವಿಷಯ ಗಂಭೀರವೆಂದು ಹೇಳಿದರಿಂದ ಸುಮ್ಮನಿದ್ದ.


'ಮಹಾರಾಜರೇ! ಲೆಕ್ಕ ಪರಿಶೋಧನೆ ಈಗಷ್ಟೇ ಮುಗಿದಿದ್ದು, ತಮ್ಮ ನಿದ್ರಾಭಂಗ ಅನಿವಾರ್ಯವಾಯಿತು. ರಾಜ್ಯದ ಬೊಕ್ಕಸ ಬರಿದಾಗಲಿದೆ. ಸಾಲಕ್ಕೇ ಎಲ್ಲವನ್ನೂ ‌ವ್ಯಯಿಸಿದರೆ, ತಮಗೇ ಕಿತ್ತು ತಿನ್ನುವ ಸ್ಥಿತಿ ಎದುರಾಗಲಿದೆ' 

Sunday, November 17, 2024

ಮುಸುಕು

ಹಾಸಿಗೆ ಮೇಲೆ ಉಸಿರಾಡುತ್ತಲೇ ಹಾಗೆಯೇ ಕಣ್ಣು ನಾಲಿಗೆ ಹೊರ ಬಿಟ್ಟು ಮಲಗಿದ್ದ. ಬದುಕಿದ್ದಾಗಲೇ ಸುಡುವುದು ಅಮಾನವೀಯವೆಂದು ಸುತ್ತ ಕೆಲವರು ಸಾವಿಗಾಗಿ ಎದುರು ನೋಡ್ತಿದ್ದರು. ಸಾಕಷ್ಟು ಜನ, ಮತ್ತೆ ಮೊದಲಿನಂತೆ ಆತ ಎದ್ದು ಕೂರುವನೇ ಎಂದು ನೋಡುತ್ತಿದ್ದರು. ಆದರೆ ಸಾವು ಕೆಳಗೂ ಇಳಿಯದೇ, ಹೊರಗೂ ಹೊರಳದೇ ಗಂಟಲಲ್ಲೇ ಕೂತು ಇವನನ್ನ ಕೇಳಿತು - 'ಈಗ ಹೇಳು. ಹೇಳುವವರೆಗೂ ಈ ಜಾಗ ಬಿಟ್ಟು ಕದಲಲಾಗದು.‌ ನನಗಿದೋ ಆದ ಆಜ್ಞೆ'.