Thursday, October 2, 2025

ಪಲಾಯನ

ಸಂಜೆ ಸುಮಾರು 6:30ರ ಸಮಯ. ಕತ್ತಲು ಬೇಗನೆ ಕವಿದಿತ್ತು‌. ಮನೆಯಲ್ಲೆಲ್ಲೂ ದೀಪ ಹಚ್ಚಿರಲಿಲ್ಲ. ನಿಧಾನ ಕಣ್ಣು ತೆರೆದ ಸದಾನಂದನಿಗೆ ಎಲ್ಲವೂ ಈ ನಿದ್ರೆಯ ಕನಸಾಗಿರಲಿಲ್ಲವೇ ಎನ್ನುವ ಸಂಶಯವಂತೂ ಸುಳಿಯಿತು. ಕಣ್ಮಿಟುಕಿಸಿದಂತೆ ಒಡನೆಯೆ ಪ್ರಜ್ಞೆ ಗೋಚರಿಸಿತು‌. ಆಗ್ಗಿಂದ ಕನಸಲ್ಲೋ ಅಥವಾ ನಿಜವೋ ಯಾರೋ ಬಾಗಿಲು ಬಡಿದಂತಿತ್ತು‌. ಸಾಕಷ್ಟು ಬಾರಿ ಇವನಿಗೆ ಕನಸೋ ನನಸೋ ಎನ್ನುವ ರೀತಿಯಲ್ಲಿ ಘಟನೆಗಳು ಘಟಿಸಿದ್ದುಂಟು. ಒಂದೊಮ್ಮೆ ಬಚ್ಚಲ ಮನೆಯಲ್ಲಿ ಕೂತು ಉಚ್ಚೆ ಉಯ್ಯುವಂತೆ ಕನಸು ಬಿದ್ದಿತ್ತು. ಎಚ್ಚರವಾದಾಗ ಚಡ್ಡಿ ಚೂರು ಒದ್ದೆಯಾಗಿದ್ದು ನೋಡಿ, ತಾನು ಬಚ್ಚಲಲ್ಲಲ್ಲವೇ ಉಯ್ದಿದ್ದು ಎಂದು ಗಲಿಬಿಲಿಗೊಂಡಿದ್ದ. ಈಗಲೂ ಹಾಗೆಯೇ ಯಾಕಾಗಿರಬಾರದು ಅಂತೆನಿಸುತ್ತಿದ್ದಂತೆ ಬಾಗಿಲು ತಟ್ಟಿದ ಸದ್ದಾಯಿತು.