Tuesday, August 23, 2022

ಸ್ವಾರ್ಥ?

ಕ್ಯಾಂಪಾಸಿನ ಖಾಲೀ ರೋಡುಗಳಲ್ಲಿ ಸಂಜೆಯ ವೇಳೆಗೆ ವಾಕಿಂಗ್ ಮಾಡುವುದು ಒಂದು ರೀತಿಯ ನೆಮ್ಮದಿ ಸದಾನಂದನಿಗೆ. ಜೊತೆಗೊಬ್ಬರು ಇರಬೇಕಷ್ಟೇ - ಮಾತಿಗೆ. ಇಲ್ಲಿಯ ಮರಗಳದ್ದು ವಿಶೇಷ ವಾಸನೆ. ತನ್ನ ಎಂ. ಎಸ್ಸಿ ದಿನಗಳಲ್ಲಿ ಕ್ಯಾಂಪಾಸು ವಿಶೇಷವೆನಿಸಿದ್ದು ಈ ಮರಗಳಿಂದಲೇ. ಆ ಎಂ.ಎಸ್ಸಿಯ ದಿನಗಳ ನೆನಪುಗಳನ್ನ ಎಲ್ಲಿಂದಲೋ ಸಂಜೆಯ ತಂಗಾಳಿ ಹೊತ್ತು ತಂದಂತೆ, ಮರಗಳೆಲ್ಲಾ ಅಲುಗಾಡುತ್ತಾ, ಅದೇ ವಾಸನೆ ಮೂಗಿಗೆ ಹೊಡೆಯಲು ಸದಾನಂದ ಉತ್ಸುಕನಾಗುತ್ತಿದ್ದ. ಮಾತು ನಿಯಂತ್ರಣವನ್ನ ಕಳಕೊಂಡು ದಿಕ್ಕೆಟ್ಟು ಹರಿಯುತ್ತಿತ್ತು‌. ಇದಕ್ಕಾಗಿಯೇ ಆತ ಸಂಜೆಯ ವೇಳೆ, ಕ್ಯಾಂಪಾಸಿನ ರೋಡು ಖಾಲೀ ಇದ್ದಾಗ ನಾಗ್ ಜೊತೆ ವಾಂಕಿಂಗ್ ನೆಪದಲ್ಲಿ ಹರಟಲು ಇಚ್ಛಿಸುತ್ತಿದ್ದದ್ದು - ಯಾವ ನಿಯಂತ್ರಣಕ್ಕೂ ಬಾರದೆ, ಯಾವ ದಾಕ್ಷಿಣ್ಯಕ್ಕೂ ಒಳಪಡದೆ, ಯಾವ ಭಯಕ್ಕೂ ಅಂಜದೇ ಹೊರಡುತ್ತಿದ್ದ ಮಾತಿಗಾಗಿ.