Thursday, August 11, 2016

ಇವಳೆ

ಇವಳೆ,


'ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ....'

ಎಂದೂ ಸಹ ನನ್ನದೊಂದು ಅಪರಿಪೂರ್ಣ, ಅಶಕ್ತ ಬರವಣಿಗೆ. ಪದಗಳು ತಿಳಿದಿಲ್ಲೆಂದಲ್ಲ. ಪದಗಳನ್ನ ರಸವತ್ತಾಗಿ ಜೋಡಿಸುವ ಕಲೆ ಸಿದ್ದಿಸದೇನೋ ಈ ಜನ್ಮಕ್ಕೆ. ನಿನ್ನಂದವನ್ನ ಹೊಗಳಲಿಕ್ಕಂತಲೇ ಅಲ್ಲ ಈ ಸಿದ್ದಿ. ಹೊಗಳಬೇಕೆಂದಿದೆ, ನಿಜ. ಆದರೆ ಹೊಗಳಿ ಹೊಗಳಿ ನಿನ್ನನ್ನು ಎತ್ತಲೋ ಏರಿಸಿ ನಿನ್ನ ಮನದೊಳಗಿಳಿಯಬೇಕೆನ್ನುವ ಬಯಕೆಯೇನೂ ಇಲ್ಲ. ಇದ್ದದ್ದನ್ನು ಇದ್ದಹಾಗೆ ಹೇಳಲು ಯಾವ ಪದಸಮುಚ್ಚಯಗಳು ಬೇಡವೇನೋ. ಅದು ಹೊಗಳಿಕೆಯೂ ಅಲ್ಲೇನೋ! ನೀ ಚೆಂದವಾಗಿದ್ದಿ ಎನ್ನುವುದನ್ನು ಬಹಳ ರಸವತ್ತಾಗಿ ಹಲವಾರು ಉಪಮೆ, ರೂಪಕಗಳಿಂದ ವರ್ಣಿಸಿ ಹೇಳುವುದು ನಿನ್ನೆಡೆಗಿನ ಒಲುಮೆ-ನಲುಮೆಗಳ ಹೊರರೂಪಕಗಳಷ್ಟೇ! ಅವುಗಳ ಬದಲಾಗಿ 'ನೀ ಚೆಂದವಿದ್ದೀ' ಎಂದಷ್ಟೇ ಎನಲು ಭಾವರಸಗಳೆಲ್ಲವನ್ನೂ ಕಳಕೊಂಡು ಬಡಕಲು ಅಸ್ಥಿಪಂಜರದಹಾಗೆ ಕಾಣುವ ರಸಹೀನವೆಂದೆಂಥೆನಿಸುವ ಆ ಎರಡು ಪದಗಳೂ  ಒಲುಮೆ-ನಲುಮೆಗಳ ಹೊರರೂಪಕಗಳೇ! ನನ್ನ ಬರವಣಿಗೆಯ ಬಗೆಗಿನ ತಪನವಿರುವುದೆಲ್ಲಾ ನಿನ್ನೆಡೆಗಿನ ಭಾವನೆಗಳಿಗೆ ತದ್ರೂಪವನ್ನೇ ಸೃಷ್ಟಿಸಲಾಗುತ್ತಿಲ್ಲವೆನ್ನುವುದರಲ್ಲಷ್ಟೇ! ನನ್ನ ನಡವಳಿಕೆ, ನನ್ನ ಮಾತುಗಳು ನನ್ನೊಳಗಿನ ಆ ಭಾವನೆಗಳ ಹೊರರೂಪಕಗಳಂತೆ ಕಾಣಿಸದಾಗಿವೆಯೇ ಎನ್ನುವ ಬೇಸರವಷ್ಟೇ! ನನ್ನ ಮಾತುಗಳೆಲ್ಲವೂ ಒಬ್ಬ ಹುಡುಗ ಒಂದು ಹುಡುಗಿಯನ್ನ ಮೆಚ್ಚಿಸಲಿಕ್ಕೆಂದೇ ಆಡುವಂಥಹ ಚಾಲ್ತಿಯಲ್ಲಿರುವ ಪದ್ದತಿಯೊಂದರ ಅನುಕರಣೆಯಂತೆ ತೋರುವುದೇ ಎನ್ನುವ ಗುಮಾನಿ! ನಾನೆಂದೂ ನಿನ್ನನ್ನು ಮೆಚ್ಚಿಸುವ ಸಲುವಾಗಿ ನಡೆಯಬೇಕೆಂದು ಭಾವಿಸಿದ್ದಿಲ್ಲ. ಅದರಲ್ಲಿ ನನಗೆ ಅಶ್ರದ್ದೇಯೇ, ಅಪನಂಬಿಕೆಯೆ ಹೆಚ್ಚು. ಮಿಗಿಲಾಗಿ ಅದು ನಾಟಕೀಯವೂ ಹೌದು. ಮನಸಿನ ಭಾವನೆಗಳನ್ನು ಯಥಾವತ್ತಾಗಿ ನಿನ್ನ ಮುಂದೆ ಎತ್ತಿಡುವುದಕ್ಕಿಂತ ಮಿಗಿಲಾದ ಅಭಿಮಾನದ, ಒಲುಮೆಯ ಮಾತುಗಳು ಅನವಶ್ಯಕ ಹಾಗೂ ಅಪ್ರಯೋಜಕ!