ಗುಡ್ಡದ ಮೇಲಿದ್ದ ವಾಟೆರ್ ಟ್ಯಾಂಕಿನ ಮೇಲೆ ಗಾಳಿಗೆ ಮೈಯೊಡ್ಡಿ ಕುಳಿತುಕೊಳ್ಳುವ ಆಸೆ ಇದ್ದಕ್ಕಿದ್ದ ಹಾಗೆ ಅವನಿಗೆ ಮೂಡಿತು. ದಟ್ಟ ಮಲೆನಾಡೇನಲ್ಲ ಅದು. ಆದರೂ ಸಿಟಿಯ ಡಾಂಬರು, ಕಾರು-ಬಾರುಗಳ, ಜನ-ಮನಗಳ ಜಂಗುಳಿಯ ಮುಂದೆ ಅತೀ ವಿಶಿಷ್ಟವಾದದ್ದು, ಬೇಕೆ ಬೇಕೆನಿಸುವಂಥದ್ದು ಆ ಗಾಳಿಯ ಪ್ರವಾಹ. ‘ಗುಡ್ಡ’, ತಪ್ಪಲು’, ‘ಮಳೆ’, ‘ಕಾಡು’, ‘ಹಳ್ಳ’ ಈ ಪದಗಳಿನ್ನು ಅವನ ಮನಸ್ಸಲ್ಲಿ ಜೀವಂತಿಕೆಯನ್ನ ಉಳಿಸಿಕೊಂಡಿದ್ದವು, ಜೀವಂತಿಕೆಯನ್ನ ತರಿಸುತ್ತಿದ್ದವು. ‘ನಾಯಿ ನರಿಗಳ ಹಾಗೆ ಉಂಡು ಮಲಗಿ, ಸ್ರವಿಸಿ, ಸುಖಿಸಿ, ಹುಟ್ಟಿಸಿದವಗಳಿಗೂ ಉಣಿಸುತ್ತಲೇ ಸಮಯ ದೂಡುವುದನ್ನ ವಿಕಾಸ ಮನುಷ್ಯನಿಗೆ ಒದಗಿಸಿಲ್ಲ’, ಎಂದುಕೊಳ್ಳುತ್ತಾ ನಗುತ್ತಾನೆ.