Tuesday, August 23, 2022

ಸ್ವಾರ್ಥ?

ಕ್ಯಾಂಪಾಸಿನ ಖಾಲೀ ರೋಡುಗಳಲ್ಲಿ ಸಂಜೆಯ ವೇಳೆಗೆ ವಾಕಿಂಗ್ ಮಾಡುವುದು ಒಂದು ರೀತಿಯ ನೆಮ್ಮದಿ ಸದಾನಂದನಿಗೆ. ಜೊತೆಗೊಬ್ಬರು ಇರಬೇಕಷ್ಟೇ - ಮಾತಿಗೆ. ಇಲ್ಲಿಯ ಮರಗಳದ್ದು ವಿಶೇಷ ವಾಸನೆ. ತನ್ನ ಎಂ. ಎಸ್ಸಿ ದಿನಗಳಲ್ಲಿ ಕ್ಯಾಂಪಾಸು ವಿಶೇಷವೆನಿಸಿದ್ದು ಈ ಮರಗಳಿಂದಲೇ. ಆ ಎಂ.ಎಸ್ಸಿಯ ದಿನಗಳ ನೆನಪುಗಳನ್ನ ಎಲ್ಲಿಂದಲೋ ಸಂಜೆಯ ತಂಗಾಳಿ ಹೊತ್ತು ತಂದಂತೆ, ಮರಗಳೆಲ್ಲಾ ಅಲುಗಾಡುತ್ತಾ, ಅದೇ ವಾಸನೆ ಮೂಗಿಗೆ ಹೊಡೆಯಲು ಸದಾನಂದ ಉತ್ಸುಕನಾಗುತ್ತಿದ್ದ. ಮಾತು ನಿಯಂತ್ರಣವನ್ನ ಕಳಕೊಂಡು ದಿಕ್ಕೆಟ್ಟು ಹರಿಯುತ್ತಿತ್ತು‌. ಇದಕ್ಕಾಗಿಯೇ ಆತ ಸಂಜೆಯ ವೇಳೆ, ಕ್ಯಾಂಪಾಸಿನ ರೋಡು ಖಾಲೀ ಇದ್ದಾಗ ನಾಗ್ ಜೊತೆ ವಾಂಕಿಂಗ್ ನೆಪದಲ್ಲಿ ಹರಟಲು ಇಚ್ಛಿಸುತ್ತಿದ್ದದ್ದು - ಯಾವ ನಿಯಂತ್ರಣಕ್ಕೂ ಬಾರದೆ, ಯಾವ ದಾಕ್ಷಿಣ್ಯಕ್ಕೂ ಒಳಪಡದೆ, ಯಾವ ಭಯಕ್ಕೂ ಅಂಜದೇ ಹೊರಡುತ್ತಿದ್ದ ಮಾತಿಗಾಗಿ.

Wednesday, June 29, 2022

ಹೇಡಿ?

 ಹೊರಗಿಂದಲೋ, ಇಲ್ಲಿಯವರೋ - ಝಗಮಗಿಸುವ ದೀಪ, ಅಲಂಕಾರಗಳು, ಮೆರುಗು, ಕಾರ್ಯಕ್ರಮಗಳು,  ಸುತ್ತಾಟ - ದಸರೆಯ ಸಂಜೆಗಳಿಗೆ ಮೈಸೂರಿನ ಬೀದಿಯಲ್ಲಿ ಜನ ಹೆಚ್ಚು. ಒಂದ್ಹತ್ತು ದಿವಸಗಳು ಮಿನುಗುವ, ಮನ ಸೆಳೆಯುವ ಮೈಸೂರನ್ನ ಮುದಕ್ಕೆಂದೇ ಮುತ್ತಿಕ್ಕುವುದು. ದಸರೆಗೆ ಮೈಸೂರಿನ ಬೆನ್ ಬಲವಿಲ್ಲದೆ ಅರ್ಥವುಂಟೆ? ಉತ್ಪ್ರೇಕ್ಷೆ ಹೆಚ್ಚೆನಿಸಿದ್ದರೂ ಅಡ್ಡಿಯಿಲ್ಲ. ಆದರೆ ಇದೊ, ರಾತ್ರಿಯ ಹತ್ತೂವರೆ ಬಸ್ಸಿಗೆ ಹೊರಟಿದ್ದೇನೆ, ಚುಟ್ಟಿಕೆರೆಗೆ. ದಸರೆಯ ಎಂಟನೆಯ ರಾತ್ರಿ. ಇಂದೇ ಇಲ್ಲಿ‌ ಮಳೆಯಿಲ್ಲ. ಪ್ರತೀ ಸಂಜೆ ಕಾಲೇಜಿನಿಂದ ಹೊರಬೀಳೋ ಹೊತ್ತಿಗೆ  ಎಂಟರ ಆಸು ಪಾಸು. ಭಾಗಶಃ ದಿವಸಗಳು ಈ ಹೊತ್ತಿಗೆ ಮಳೆಯಿಂದ ತಂಪೆರೆಸಿಕೊಳ್ಳಲಿಚ್ಛಿಸಿದ್ದವು‌. ಇದೇನು ಮೊದಲ ದಸರೆಯೇನಲ್ಲ. ಮೈಸೂರಿಗೆ ಬಂದು 11 ವರ್ಷಗಳಾಗಿದ್ದಾವಾದರೂ, ಅದರ ವರ್ಣನೆ ನನಗಸಾಧ್ಯ. ಪದಗಳಿಲ್ಲೆಂದಲ್ಲ, ಅನುಭವ ಆಸಕ್ತಿಯ ಕೊರತೆಯೇ? ಇಂದೂ ತಿಳಿದಿಲ್ಲ. ಆಟೋದಲ್ಲಿ ಕುಳಿತು ಹೊರಗೆಲ್ಲಾ ನೋಡುವಾಗ ಒಂದು ಬಗೆಯ ಪುಳಕವೇ. ಬಣ್ಣ ಬಣ್ಣದ ಬಲ್ಬುಗಳು, ಒಂದು ವಿನ್ಯಾಸದಲ್ಲಿ ಹತ್ತುರಿಯುತ್ತಿದ್ದದ್ದು ಒಂದು ಬಗೆಯ ಲೈಟು ಬಲ್ಬುಗಳ ಡ್ಯಾನ್ಸಿನಂತೆ. ವಿವಿಧ ಬಗೆಯ ಆಕೃತಿಗಳು - ಹೂ, ಎಲೆ, ಮರ, ಪ್ರಾಣಿ, ಮುಷ್ಯನ ವಿವಿಧ ಸಂಸ್ಕೃತಿಯ ಮುಖ, ಭಂಗಿಗಳು- ಲೈಟುಗಳಿಂದಲೇ ನಿರ್ಮಿತ. ಎಲ್ಲೆಡೆಯೂ ಬೆಳಕು, ಬಣ್ಣ, ಆಕೃತಿಗಳು, ಬೆಳಕಿನ ನೃತ್ಯ, ನೋಡುವ ಕಂಗಳು. ಇದರಲ್ಲೊಂದಷ್ಟು ನನ್ನ ಮನಸಿಗೆ ಹಿತವೆನಿಸುವ ಚೆಲುವನ್ನ ಹುಡುಕ ಹೊರಡಲು ಕಾರಣ ನನ್ನ ಬಳಿಯೊಂದು ಬೈಕ್ ಹಾಗೂ ಕ್ಯಾಮೆರಾ ಇದ್ದಿದ್ದರಿಂದ. ಲೈಟ್ ಗಳು ಆಫ್ ಆಗುವ ಮುನ್ನ, ಟ್ರಾಫಿಕ್ ಎಲ್ಲಾ ಕಡಿಮೆಯಾಗುವ ಹೊತ್ತಿಗೆ ಸಿಟಿಯನ್ನ ಸುತ್ತಿ ಮನಸ್ಸು, ಕ್ಯಾಮೆರಾಗಳನ್ನ ತುಂಬಿಕೊಳ್ಳಲು ಈ ಬಾರಿ ಸಾಧ್ಯವಾಗಲಿಲ್ಲ.

Thursday, April 28, 2022

ಠಣ್.. ಠಳಾರ್.. ಠಿಳೀರ್..


"ವಾ.. ಯಾರ್ ಹೇಳಿದ್ದು?

“ಯಾರ್ ಯಾಕ್ ಹೇಳ್ಬೇಕ್ರೀ. ನಮ್ ಏರಿಯಾ ಮೋಟನ್ ಬಗ್ಗೆ ಬೇರೆ ಯಾರೋ ಯಾಕ್ರೀ ಹೇಳ್ಬೇಕು?”

“ನಿಮ್ ಏರಿಯಾದವ್ನು ಅಂತೀರಿ. ಆದ್ರೂ ಅವ್ನನ್ನ ಸರಿಯಾಗಿ ಅರ್ಥಾನೆ ಮಾಡ್ಕೊಂಡಿಲ್ವರೀ”

“ಏನ…?”

“ಇನ್ನೇನ್ ಮತ್ತೆ. ಸುಮ್ನೆ ಬೊಗಳೆ ಬಿಟ್ಕೋತಾ ಕೂಡ್ಬೇಡಿ. ನನ್ ಕೇಳಿ”

“ಯಾಕ್ಲಾ ತಿಕಾ ಕಡಿತದಾ? ಏನೇನೋ ಮಾತಾಡ್ತಿದೀಯಾ? ಮುಚ್ಕಾಂಡ್ ನಿಮ್ ಏರಿಯಾಕ್ ಹೋಗ್ಬಿಡು. ಏನೋ ಮೋಟನ್ ಜೊತೆ ಓಡಾಡ್ತಿದ್ದೆ ಅಂತ ಸುಮ್ನಿದೀವಿ ಅಷ್ಟೆ. ನಿಂಗೇನ್ಲಾ ಗೊತ್ತು?”

Sunday, April 17, 2022

ಮೌನದ ಮಾತು

 ಮಾತು - 5 

ಸಹಾನುಭೂತಿ...


ಅಲ್ಲೇ ನಿಂತು ನೋಡುತ್ತಿರುವ ನೀವು.....

ನನ್ನ ಹಾಗೆ ಮನಬಂದಲ್ಲಿ ಓಡಲಾಗದೆ... ಹಿಡಿಯಲಾಗದೆ!

ಕಳೆದುಕೊಂಡದ್ದಕ್ಕಾಗಿ ವಿಷಾದವಿದೆ...

ಮೌನದ ಮಾತು

 ಮಾತು - 4

ಅನ್ನಂ ಬ್ರಹ್ಮೇತಿ ವ್ಯಜಾನಾತ್... 










Wednesday, March 30, 2022

ಕ್ಯಾಂಪಸ್ ರೌಂಡ್ಸ್ !

 

'See... ' ಸದಾನಂದ ಒಂದು ಸಿಪ್ ಕಾಫಿ ಹೀರಿದ. ಕ್ಯಾಂಪಸಿನಲ್ಲಿ ಶುರುವಾಗಿದ್ದ ಹೊಸ ಅಂಗಡಿ. ನೋಡಿದರೇನೆ ತಿಳೀತಿತ್ತು ಮಲೆಯಾಳಿ -  ಮುಸಲ್ಮಾನನದ್ದು. ಈ ಮಲೆಯಾಳಿ ಮುಸಲ್ಮಾನರೊಂದಿಗೆ ಅದೇನೋ ಹೋದಲ್ಲೆಲ್ಲಾ ನಂಟು. ಹಿಂದೆ ತಾನಿದ್ದ ಮಂಡ್ಯದಲ್ಲೂ ಸಹ ಮನೆಯ ಹತ್ತಿರ ಇದ್ದ ದಿನಸ ಅಂಗಡಿಯೂ ಸಹ ಮಲೆಯಾಳಿ ಮುಸಲ್ಮಾನನದ್ದೇ‌. ಅದು ತಿಳಿದದ್ದು ಬಹಳ ದಿನಗಳ ತರುವಾಯ. ತನ್ನ ಮಾವ ಮನೆಗೆ ಬಂದಿದ್ದ ಸಂದರ್ಭದಿನಸಿ ಕೊಳ್ಳೋದಿಕ್ಕೇಂತ ಹೊರಗೆ ಬಂದಿದ್ದರು. ಅವರೇ ತಿಳಿಸಿದ್ದುಅದೊಂದು ಮುಸಲ್ಮಾನ ಅಂತ. ಪ್ರಾಯಶಃ ಆರೆಸ್ಸೆಸ್ಸಿನ ಕಟ್ಟಾ ಭಕ್ತರಾಗಿದ್ದ ಅವರಿಗೆ ಈ ವಾಸನೆ ಬಲು ಬೇಗ ತಾಗಿತ್ತೇನೋ. ಅವರು ಅದನ್ನ ಸಾಧಿಸಲಿಕ್ಕೆಂದೇ ಶುಕ್ರವಾರ ಹನ್ನೆರೆಡು ಗಂಟೆಗೆ ಸರಿಯಾಗಿ ಮುಚ್ಚಿದ್ದ ಅಂಗಡಿಯನ್ನ ಸದಾನಂದನಿಗೆ ಸಾಕ್ಷಿಯಾಗಿ ತೋರಿಸಿ ಬೀಗಿದ್ದರು. ಅಷ್ಟೊಂದು ಕರಾರುವಕ್ಕು.

Tuesday, March 29, 2022

ಜಾತಿ - ಪ್ರೀತಿ? (ಕಿಟ್ಟಿಯ ಕಥೆಗಳು)

ಕಿಟ್ಟಿಗೆ ಪ್ರೀತಿಸಬೇಕೆಂಬೋ ಹಂಬಲ ಇದ್ದೇ ಇತ್ತು. ಪ್ರೀತಿಯ ಕಲ್ಪನೆ ಅದೇ - ಚುಂಬನ, ಆಲಿಂಗನ. ಅದರ ಮುಂದಿನದ್ದು ಇವನ ಕಲ್ಪನೆಯಾಚೆಗಿನದ್ದು. ಚಿಕ್ಕ ವಯಸ್ಸಿಗೆಯೇ ಆಲಿಂಗನದ, ಚುಂಬನದ ಬಗ್ಗೆ ಅಷ್ಟು ಕುತೂಹಲ, ಆಸೆ ಹುಟ್ಟಲಿಕ್ಕೆ ದೊಡ್ಡವರಿನದ್ದೂ ಪಾಲುಂಟೇನೋ. ಯಾವುದನ್ನ ಹೆಚ್ಚು ಮಡಿಯಾಗಿ ಮುಚ್ಚಿಟ್ಟು, ಕಿಟ್ಟಿಯನ್ನ ಸಾಧ್ಯವಾದಷ್ಟು ಅದರಿಂದ ದೂರವಿರುವ ಹಾಗೆ ದೊಡ್ಡವರೂ, ಹಾಗೆಯೇ ಸಿನೆಮಾಗಳು ತೋರಿಸ್ತಾ ಇದ್ದವೋ ಅವು ತನಗೂ  ಬೇಕೆನಿಸುವಂತಹ ಆತುರವಾಯಿತು ಕಿಟ್ಟಿಗೆ‌. ಕಿಟ್ಟಿಯ ೧೪ನೇ ವಯಸ್ಸಿನವರೆಗೂ ಆತ ದಿನಾ ಬೆಳಿಗ್ಗೆ ದೇವರಲ್ಲಿ ಕೇಳತ್ತಿದ್ದದ್ದು ಒಂದೆಯೇ - ಆದಷ್ಟು ಬೇಗ ತಾನು ದೊಡ್ಡವನಾಗಬೇಕು ಹಾಗೂ ತನ್ನನ್ನ ಹೆಚ್ಚು ಪ್ರೀತಿಸುವ ಹುಡುಗಿ ಸಿಗಬೇಕೆಂದು - ಪ್ರೀತಿಯೆಂದರೆ ಅದೇ ಮೇಲೆ ಹೇಳಿದ್ದು‌. ಆದರೆ ಇದ್ದಕ್ಕಿದ್ದ ಹಾಗೆ ಕಿಟ್ಟಿಯ ಒಳಗೆ ಒಂದು ರೂಪಾಂತರವೇ ಸಂಭವಿಸಿ ಹೋಯಿತು. ಇದ್ದಕ್ಕಿದ್ದ ಹಾಗೆ ಕಿಟ್ಟಿ ಭಗವದ್ಗೀತೆ ಓದಲಾರಂಭಿಸಿದ. ಗಾಂಧಿಯ ಕಥೆ ಕೈಗಿರಿಸಿದ. ವಿವೇಕ ನುಡಿಗಳು ಕಿವಿ ಮನದಾಳದಲ್ಲಿರಿಂಗಣಿಸಲಾರಂಭಿಸಿದವು. ಯಃಕಶ್ಚಿತ್ ಪ್ರೀತಿಯೆಂಬ ದೈಹಿಕ ಸುಖಕ್ಕಾಗಿ ಮೋಕ್ಷಪ್ರಾಪ್ತಿ ಕೈತಪ್ಪೀತು ಎನ್ನುವ ಅರಿವು ೧೫ ನೇ ವಯದ ಹುಡುಗನಲ್ಲಿ ಬಂದದ್ದು ಎಂದಾದರೂ ಕಂಡಿದ್ದುಂಟೇ? ಕಿಟ್ಟಿ ಬದಲಾಗಿದ್ದ. ದಿನಾ ಸ್ನಾನ ಮಾಡಿ ಪಂಚೆಯುಟ್ಟು, ದೇವರಿಗೆ ಕೈ ಮುಗಿದು ಒಂದಷ್ಟು ಸ್ತೋತ್ರಗಳನ್ನ ಹೇಳಿದಾಗ ಮನದಲ್ಲಿನೆಮ್ಮದಿ. ಶಾಲೆಯಿದ್ದಕ್ಕೂ ಸ್ತೋತ್ರಗಳೇ ತಲೆಯಲ್ಲಿ ತುಂಬಿರುತ್ತಿದ್ದವು. ಮತ್ಯಾವ ಯೋಚನೆಗಳೂ ತಲೆಯೊಳಗೆ ತೂರದ ಹಾಗೆ ಕಿಟ್ಟಿ ಹೂಡಿಕೊಂಡಿದ್ದ ಉಪಾಯವಿದು‌.‌ ಒಮ್ಮೊಮ್ಮೆ ಹನುಮಾನ್ ಚಾಲೀಸ ಓದುತ್ತಲೇ ಪುಸ್ತಕದ ಹಿಂದೆ ಅದರ ಪ್ರಕಾಶನದ ವಿಳಾಸವನ್ನೆಲ್ಲಾ ಓದಿದ.‌ ತಲೆಯೊಳಗೆ ಅಚ್ಚತ್ತಿಹೋಯಿತು. ವಿಳಾಸವೂ ಹನುಮಾನುಚಾಲೀಸದ ಭಾಗವಾಗಿ ಹೋಯಿತು. ಇಷ್ಟೆಲ್ಲಾ ಮಾರ್ಪಾಡು ಕಿಟ್ಟಿಯೊಳಗಾಗಲು ಕಾರಣವೂ ಉಂಟು. 

Monday, March 28, 2022

ಕಳ್ಳರು.... ! (ಕಿಟ್ಟಿಯ ಕಥೆಗಳು)

ದೇವಸ್ಥಾನದ ಆವರಣದಲ್ಲೊಂದು ಅರಳಿ ಕಟ್ಟೆ‌, ಕೆಲ ನಾಗ ವಿಗ್ರಹಗಳು, ನವಗ್ರಹ ವಿಗ್ರಹಗಳು. ಭಾನುವಾರದಂದು ಕಿಟ್ಟಿ, ಅಕ್ಕ ಹಾಗೂ ಅಭಿಯ ಬಿಡಾರ ಅಲ್ಲೇ. ಅಲ್ಲೊಂದು ಅವರದ್ದೇ ಲೋಕ. ಮೂವರೂ ಸೇರಿ ಅಲ್ಲಿದ್ದ ವಿಗ್ರಹಗಳಿಗೆ ನೀರು ಹಾಕಿ ತೊಳೆದು, ಕುಂಕುಮ ಇಟ್ಟು, ಹಾರಗಳನ್ನ ಹಾಕಿ ಅದನ್ನೆಲ್ಲಾ ನೋಡಿ ಸಂಭ್ರಮಿಸ್ತಿದ್ದರು. ಆ ಹಾರಗಳನ್ನೂ ಅವರೆ ತಯಾರಿಸ್ತಿದ್ದರು. ಒಂದಷ್ಟು ಅರಳಿ ಎಲೆಗಳನ್ನ ಕಿತ್ತು, ದಾರಕ್ಕೆ ಆ ಅರಳಿ ಎಲೆಗಳನ್ನ ಪೋಣಿಸಿ, ಅರಳೀ ಹಾರವನ್ನ ತಯಾರಿಸೋದು ಮೂವರಿಗೂ ಸಂಭ್ರಮದ ಕೆಲಸ.